'Uneasy Neighbours' - A book by Ram Madhav, general secretary of Bharatiya Janata Party
ಒಂದು ದೊಡ್ಡ ಹಡಗನ್ನು ಕಲ್ಪಿಸಿಕೊಳ್ಳಿ. ಅಲ್ಲಿ ಹಲವು ನೂರು ಜನ ನಿರಂತರ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ, ರಾಶಿರಾಶಿ ಕಚ್ಚಾ ಸಾಮಗ್ರಿ ಬಿದ್ದಿದೆ; ಬಗೆಬಗೆಯ ವಸ್ತುಗಳು, ಆಟಿಗೆಗಳು ಒಂದೇ ಸಮನೆ ತಯಾರಾಗುತ್ತಿವೆ, ಅಲ್ಲಿಯೇ ಪ್ಯಾಕಿಂಗ್ ಸಹಾ ಆಗುತ್ತಿದೆ, ಹಡಗು ಚಲಿಸುತ್ತಲೇ ಇದೆ, ಸುತ್ತ ಪ್ರಶಾಂತ ಮಹಾಸಾಗರದಲ್ಲಿ ಅಲೆಗಳು ಭೋರ್ಗರೆಯುತ್ತಿವೆ... ಇದನ್ನು ನೀವು ಹೇಗೆಹೇಗೆಲ್ಲಾ ಕಲ್ಪಿಸಿಕೊಳ್ಳುತ್ತೀರಿ? ಹಾಲಿವುಡ್ ನಿರ್ಮಿತ ಯಾವುದೋ ಒಂದು ಹಳೆಯ ಭವ್ಯ ಚಲನಚಿತ್ರ ಕಣ್ಮುಂದೆ ಬಂದಿತೇ? ವಿಚಿತ್ರವೆಂದರೆ, ನಿಜ ಜೀವನದ ವಾಸ್ತವವು ಅಂತಹ ಚಲನಚಿತ್ರಗಳ ಕಲ್ಪನಾಲೋಕವನ್ನು, ಅಸಂಭಾವ್ಯ ತರ್ಕವನ್ನು ಮೀರಿಸುತ್ತದೆ - ನಾಚಿಸುವಂತಿರುತ್ತದೆ.'ಅಮೆರಿಕಾ' ಎಂದು ನಾವು ಬಹುಮಟ್ಟಿಗೆ ಸಂಬೋಧಿಸುವ 'ಯುಎಸ್ಎ', ವಿಶ್ವದ ಹಿರಿಯಣ್ಣ ತಾನೇ ಎಂದು ಭಾವಿಸಿಕೊಂಡುಬಿಟ್ಟಿದೆ. ಐರೋಪ್ಯ ಶ್ವೇತವರ್ಣೀಯರ ದುರಹಂಕಾರ, ಭೋಗವಸ್ತುಪ್ರೀತಿ, ಸ್ವಾರ್ಥ, ಪರಪೀಡನ ಪ್ರವೃತ್ತಿಗಳ ಮೂರ್ತೀಕೃತ ದೇಶವೇ ಈ ಅಮೆರಿಕಾ. ಅನೇಕ ದಶಕಗಳ ಕಾಲ ಕಮ್ಯೂನಿಸ್ಟ್ ಚೀನಾ ದೇಶವು ವಿಶ್ವಸಂಸ್ಥೆಗೆ ಹೆಜ್ಜೆಯಿಡದಂತೆ ರಾಜಕೀಯ ಮಾಡಿದ ಈ ಅಮೆರಿಕಾ, ಈಗ ಅದೇ ಚೀನಾ ದೇಶದ ಗುರಿ ಆಗಿಹೋಗಿದೆ. ಅಮೆರಿಕದ ಮಾಲ್ ಗಳು, ಮನೆಗಳು, ಕಛೇರಿಗಳು ಚೀನಾ ನಿರ್ಮಿತ ವಸ್ತುಸಾಮಗ್ರಿಯಿಂದ ತುಂಬಿಹೋಗಿವೆ. ಈಗ ಅದು ಚೀನಾದೇಶದ ಬಹುದೊಡ್ಡ ಗ್ರಾಹಕ. ಅಂತಹ ವಸ್ತು ಸಾಮಗ್ರಿಗಳ ಸರಬರಾಜನ್ನು ಹಠಾತ್ತಾಗಿ ನಿಲ್ಲಿಸಿದರೆ, ಅಮೆರಿಕಾ ತತ್ತರಿಸಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನಾ ದೇಶದ ಕುಯುಕ್ತಿ - ಕುಟಿಲೋದ್ದೇಶವೂ ಅದೇ ಆಗಿದೆ. ಮೇಲೆ ಚಿತ್ರಿಸಿದಂತೆ ಹಡಗುಗಳು ನಿತ್ಯ ಚೀನಾದಿಂದ ಅಮೆರಿಕೆಗೆ ಧಾವಿಸುತ್ತವೆ. ಹಡಗಿನಲ್ಲಿ ಕೆಲಸ ಮಾಡುವ ಶ್ರಮಿಕರ ಕೈಕಾಲುಗಳಿಗೆ ಬೇಡಿ ಒಂದು ಇರುವುದಿಲ್ಲ ಅಷ್ಟೇ!ಸ್ವಯಂಘೋಷಿತ ಹಿರಿಯಣ್ಣ ಅಮೆರಿಕೆಯನ್ನೇ ಆಪೋಶನ ತೆಗೆದುಕೊಂಡಿರುವ ಚೀನಾ ದೇಶವು ಹತ್ತಾರು ವರ್ಷಗಳಿಂದ ನೇಪಾಳ - ಬಾಂಗ್ಲಾದೇಶ - ಮಯನ್ಮಾರ್ - ಶ್ರೀಲಂಕಾ - ಮಾಲ್ಡೀವ್ಸ್ಗಳಂತಹ ಭಾರತದ ನೆರೆ(ಯ) ಹೊರೆ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಪಾಕಿಸ್ತಾನವಂತೂ ಬಿಡಿ, ಚೀನಾದ ಊಳಿಗದಲ್ಲಿ ಬಿದ್ದಿರುವ ನಾಯಿಯಾಗಿಹೋಗಿದೆ.
“ಪಾಕಿಸ್ತಾನಕ್ಕಂತೂ ಈ ಚೀನಾ ದೇಶವು ಬೇಹುಗಾರಿಕೆ ಮಾಹಿತಿ ಸಂಗ್ರಹ, ಮೇಲ್ವಿಚಾರಣೆ, ನಿಯಂತ್ರಣ, ಸಂಪರ್ಕ ವ್ಯವಸ್ಥೆ ಇತ್ಯಾದಿ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಸ್ವರೂಪದ ನೆರವು ನೀಡುತ್ತಿದೆ”ಕಾಂಗ್ರೆಸ್ ನಾಯಕತ್ವದ ಈವರೆಗಿನ ನರಸತ್ತ ಕೇಂದ್ರ ಸರ್ಕಾರವಂತೂ ಅಂತಾರಾಷ್ಟ್ರೀಯ ಪರಿಸ್ಥಿತಿಗಳನ್ನು - ಸಮಸ್ಯೆಗಳನ್ನು ಎದುರಿಸುವಲ್ಲಿ ಪೂರ್ಣವಾಗಿ ವಿಫಲವಾಗಿತ್ತು. ಐದು ದಶಕಗಳ ಹಿಂದೆ ಸೇನಾ ಆಕ್ರಮಣದಿಂದ ಭಾರತದ ದೊಡ್ಡ ಗಾತ್ರದ ಭೂಮಿಯನ್ನು ವಶಪಡಿಸಿಕೊಂಡ ಚೀನಾ ದೇಶವು, ಭಾರತವು ನೆಮ್ಮದಿಯಿಂದ ಇರಲಾಗದಂತಹ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ತಂದೊಡ್ಡಿದೆ. ಈ ಪರಿಪ್ರೇಕ್ಷ್ಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಕ್ತಾರರಾದ ರಾಮ ಮಾಧವ್ ಬರೆದಿರುವ ಅನೀಸೀ ನೈಬರ್ಸ್("Uneasy Neighbours") ಇನ್ನೂ ಹೆಚ್ಚಿನ ಮಹತ್ತ್ವ ಪಡೆಯುತ್ತದೆ. ಚೀನಾ ದೇಶವು ಟಿಬೆಟ್ ದೇಶವನ್ನೇ ನುಂಗಿಹಾಕಿದ್ದು, ನೆಹರೂ ಅವರ ಆತ್ಮಹತ್ಯಾತ್ಮಕ ಕಾರ್ಯನೀತಿಗಳು, 'ಪಂಚಶೀಲ'ದ ಅವಿವೇಕ, ಮಾವೋ-ತ್ಸೆ-ತುಂಗನ ಕುಟಿಲ ನಡೆಗಳು, ವಿಶ್ವಸಂಸ್ಥೆಗೆ ಈ ಸಮಸ್ಯೆಯನ್ನು ಕೊಂಡೊಯ್ದ ತಪ್ಪು ನಿರ್ಧಾರ, ಇತ್ಯಾದಿ ಅಧ್ಯಾಯಗಳನ್ನು ಇಲ್ಲಿ ಅವರು ವಿವರಿಸಿದ್ದಾರೆ. ನಮ್ಮ ಆತಂಕಕಾರಿ ಸ್ಥಿತಿಗತಿಯ ಅಧ್ಯಯನಕ್ಕೆ ಇದು ಸೂಕ್ತ ಗ್ರಂಥ. ಭಾರತದ ಸುತ್ತಮುತ್ತಲ ಎಲ್ಲಾ ದೇಶಗಳಿಗೆ ಚೀನಾ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ. ನಕ್ಸಲರಂತೂ ಭಾರತದ ಪೊಲೀಸ್ ಪಡೆಗಳಿಗೆ - ಅರೆಸೇನಾ ಪಡೆಗಳಿಗೆ ಅತಿ ದೊಡ್ಡ ತಲೆನೋವಾಗಿದ್ದಾರೆ. ಪಾಕಿಸ್ತಾನಕ್ಕಂತೂ ಈ ಚೀನಾ ದೇಶವು ಬೇಹುಗಾರಿಕೆ ಮಾಹಿತಿ ಸಂಗ್ರಹ, ಮೇಲ್ವಿಚಾರಣೆ, ನಿಯಂತ್ರಣ, ಸಂಪರ್ಕ ವ್ಯವಸ್ಥೆ ಇತ್ಯಾದಿ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಸ್ವರೂಪದ ನೆರವು ನೀಡುತ್ತಿದೆ. ಪಾಕಿಸ್ತಾನದ ಸೇನೆಯ ಬಹುಪಾಲು ಯಂತ್ರಾಂಶ, ಮದ್ದು ಗುಂಡು, ಬಿಡಿಭಾಗಗಳು (70 ಶತಾಂಶ) ಚೀನಾದಿಂದಲೇ ಬರುತ್ತಿವೆ. ಮೇ 1998ರ ಪಾಕಿಸ್ತಾನದ ಅಣ್ವಸ್ತ್ರ ಪ್ರಯೋಗವು ಯಶಸ್ವಿಯಾದುದಕ್ಕೆ, ಅಂದಿನ ಪ್ರಧಾನಿ ನವಾಜ್ ಷರೀಫ್ ಚೀನಾದೇಶಕ್ಕೆ ವಂದನೆ ಸಲ್ಲಿಸಿದರು. ಏಕೆಂದರೆ ಆ ಅಣ್ವಸ್ತ್ರ ಪ್ರಯೋಗಕ್ಕೆ ಸಂಬಂಧಿಸಿದ ಪ್ರತಿಯೊಂದೂ ಚೀನಾದೇಶದಲ್ಲಿಯೇ ತಯಾರಾಗಿತ್ತು. ಸೇನೆ ಮತ್ತು ಇಸ್ಲಾಮೀ ಭಯೋತ್ಪಾದಕರ ಆಡುಂಬೊಲವಾಗಿರುವ, ಭಾರತದ್ವೇಷದ ಒಂದೇ ತಂತುವಿನಿಂದ ಜನರನ್ನು ಉದ್ರೇಕಿಸಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವ ರಾಜಕಾರಣಿಗಳ ನಾಯಕತ್ವವಿರುವ ಮೂರ್ಖದೇಶ ಪಾಕಿಸ್ತಾನದ ಸಖ್ಯದಿಂದ ಈ ಚೀನಾ ದೇಶಕ್ಕೆ ಆಗುವುದಾದರೂ ಏನು, ಎಂಬ ಪ್ರಶ್ನೆ ಮೂಡುವುದು ಸಹಜ. ಹೆಚ್ಚೆಂದರೆ ಸಿಂಧುಸಾಗರಕ್ಕೆ (ಅರಬ್ಬೀ ಸಮುದ್ರ) ಪಾಕಿಸ್ತಾನದ ಮೂಲಕ ಚೀನಾಗೆ ಹತ್ತಿರದ ಸಮುದ್ರ ಮಾರ್ಗ ದೊರೆಯುತ್ತದೆ. ಅಷ್ಟೇ! ಅದೇನೂ ಅಂತಹ ದೊಡ್ಡಸಂಗತಿ ಎನ್ನಿಸುವುದಿಲ್ಲ. ಭಾರತಕ್ಕೆ ನಿರಂತರವಾಗಿ ಕಿರಿಕಿರಿ ಮಾಡುವುದು ಚಿತ್ರಹಿಂಸೆ ನೀಡುವುದೇ ಅದರ ಉದ್ದೇಶವಾಗಿದೆ. ಪ್ರಸಕ್ತ ಯುಗದಲ್ಲಿ ನೇರಾನೇರ ಯುದ್ಧಕ್ಕಿಂತ ಆರ್ಥಿಕ ಯುದ್ಧ, ದಿಗ್ಬಂಧನ, ಕಿರಿಕಿರಿಗಳೇ ಯುದ್ಧ ತಂತ್ರಗಳಾಗಿವೆ, ವ್ಯೂಹಯುಕ್ತಿಗಳಾಗಿ ಬಿಟ್ಟಿವೆ. ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧದ ಜೊತೆಗೆ, ಆತ್ಮವಿಶ್ವಾಸದ - ಶಕ್ತಿಯುತವಾದ - ಯುಕ್ತವಾದ ಅಭಿವ್ಯಕ್ತಿಯ ಆರಂಭದ ದಿನಗಳು ಇದೀಗ ಬಂದಿವೆ.
- Manjunath Ajjampura
Labels:  Book Review, ಮಂಜುನಾಥ ಅಜ್ಜಂಪುರ


